
|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕನ್ನಡವನ್ನು ತಪ್ಪಿಲ್ಲದೆ ಓದಿ, ಬರೆದು, ಸಂವಹನಿಸುವುದು ಸಮಸ್ತರ ಜವಾಬ್ದಾರಿಯುತ ಸಂಕಲ್ಪ. ಅದಕ್ಕೆ ಪೂರಕವಾಗಿ ತಾಯ್ನುಡಿಯ ಸಾಂಪ್ರದಾಯಿಕ ಕಲಿಕೆಯನ್ನು ಒಪ್ಪಿತ ರೀತಿಯಲ್ಲಿ ಪೋಷಿಸುವ ಉದ್ದೇಶದಿಂದ ಭಾಷಾವೈಜ್ಞಾನಿಕತೆಯನ್ನೂ ಯಥಾರ್ಥ ರೀತಿಯಲ್ಲಿ ಅಳವಡಿಸಿಕೊಂಡ ಪ್ರಯತ್ನ ಈ ಪುಸ್ತಕದ್ದು. ನುಡಿ ಉಚ್ಚಾರಣೆಯ ಸ್ಪಷ್ಟತೆ, ಧ್ವನಿವ್ಯತ್ಯಯ, ಪದರಚನೆ-ಬಳಕೆ, ಅರ್ಥವತ್ತಾದ ವಾಕ್ಯ ತಯಾರಿ, ಅರ್ಥವಿಶೇಷತೆ, ಸಾಂದರ್ಭಿಕತೆಯ ಪ್ರಾಯೋಗಿಕ ವಿನ್ಯಾಸ, ನುಡಿತಾತ್ವಿಕತೆ, ಭಾಷಾಸಮುದಾಯದ ಒಪ್ಪಿತತೆ ಇತ್ಯಾದಿಯ ಅನ್ವಯಿಕತೆಯ ನೆಲೆಯಲ್ಲಿ ಕನ್ನಡವನ್ನು ಸರಿಯಾಗಿ ಮಾತನಾಡುವ, ಓದುವ ಮತ್ತು ಬರೆಯುವ ಶುದ್ಧಾಶುದ್ಧತೆಯನ್ನು ಸುದೀರ್ಘವಾಗಿ ಸಲ್ಲಾಪಿಸುತ್ತ ಸಾಕಾಷ್ಟು ಪ್ರಾಯೋಗಿಕ ನಿದರ್ಶನಗಳನ್ನು ಅಳವಡಿಸಿದ ಪುಸ್ತಕವಿದು. ಕನ್ನಡದ ನೇಮಾಧಿಗಳನ್ನು ಆಧರಿಸಿ, ಕನ್ನಡ ಕಲಿಕೆಯ ಹೊತ್ತಿನಲ್ಲಿ ಎದುರಾಗುವ ಭಾಷಿಕ ಸಮಸ್ಯೆಗಳನ್ನು ಅರಿತ ಲೇಖಕರು ಸೂಕ್ತ ಒಪ್ಪಿತ ರಚನೆಗಳ ಕಲಿಕಾ ಸಹಿತ ಅಭ್ಯಾಸಯೋಗ್ಯ ಪುಸ್ತಕವನ್ನು ನೀಡಿದ್ದಾರೆ. ಕನ್ನಡ ಮಾತೃಭಾಷಿಗಳಿಗೇ ಅಲ್ಲದೇ ಕನ್ನಡ ಕಲಿಯುವ ಆಸಕ್ತರಿಗೆ ನೆರವಾಗಬಲ್ಲ ಸಹಾಯಕ ಕೃತಿಯಿದು.
ಕೃತಿಪರಿಚಯ
ನವಕರ್ನಾಟಕ ಕನ್ನಡ ಕಲಿಕೆ ಮಾಲಿಕೆಯಲ್ಲಿ ಪ್ರಕಟವಾಗಿರುವ ,ಟಿ.ಎಸ್ .ಗೋಪಾಲ್ ರವರು ಬರೆದಿರುವ, ಹಳಗನ್ನಡವನ್ನು ಓದಿ ತಿಳಿಯುವ ಸುಲಭೋಪಾಯಗಳನ್ನು ತಿಳಿಸುವ ಈ ಕೃತಿ ಕನ್ನಡ ಸಾಹಿತ್ಯಾಸಕ್ತರಿಗೆ ಹಳಗನ್ನಡ ಸಾಹಿತ್ಯದ ಮಹತ್ವವನ್ನೂ ಉಪಯುಕ್ತತೆಯನ್ನೂ ಅರ್ಥ ಮಾಡಿಸುವ ಸಾಧನವಾಗಿದೆ.
ಹಳಗನ್ನಡ ಕಾವ್ಯದ ಪ್ರಸ್ತುತತೆ,ವಿದ್ಯಾರ್ಥಿಗಳಿಗೆ,ಬೋಧಕರಿಗೆ,ಹಾಗೂ ಕಾವ್ಯಾಸ್ವಾದಕರಿಗೆ ಹೇಗೆ ಅಗತ್ಯ ಎಂಬುದರ ಪ್ರಸ್ತಾವನೆಗಳ ಮೂಲಕ ಕೃತಿ ಆರಂಭಗೊಂಡಿದೆ.ಹಳೆಗನ್ನಡದ ಪರಿಧಿಯಲ್ಲಿ ಪೂರ್ವದ ಹಳಗನ್ನಡ ,ಹಳಗನ್ನಡ ಹಾಗೂ ನಡುಗನ್ನಡ ಮುಂತಾದ ಕಾಲಘಟ್ಟಗಳನ್ನೂ ವ್ಯಾಪಕವಾಗಿ ಚರ್ಚಿಸಿ ನಿದರ್ಶನಗಳನ್ನು ನೀಡಿದ್ದಾರೆ ಲೇಖಕರು.
ಕನ್ನಡದ ಶಾಸನ ಪದ್ಯಗಳು,ಮೊದಲ ಗದ್ಯಕೃತಿ ವಡ್ಡಾರಾಧನೆ,ಕವಿರಾಜಮಾರ್ಗ,ಪಂಪಭಾರತ, ಗಧಾಯುದ್ಧ, ಕುಮಾರವ್ಯಾಸ ಭಾರತ,ಗಿರಿಜಾಕಲ್ಯಾಣ,ದುರ್ಗಸಿಂಹನ ಪಂಚತಂತ್ರ,ಜನ್ನನ ಅನಂತನಾಥ ಪುರಾಣ,ಮುಂತಾದ ಕೃತಿಗಳ ಪದ್ಯಗಳನ್ನು ವಿಭಕ್ತಿ ಪ್ರತ್ಯಯಗಳು,ಸರ್ವನಾಮಗಳು,ಕ್ರಿಯಾಪದಗಳು,ಭೂತ,ಭವಿಷ್ಯತ್ ವರ್ತಮಾನ ಕಾಲ,ಮುಂತಾದ ವ್ಯಾಕರಣ ಅಂಶಗಳ ವಿವರಣೆಗೆ ಸ್ವಾರಸ್ಯಕರವಾಗಿ ಬಳಸಿಕೊಳ್ಳಲಾಗಿದೆ.ಈ ಸಂಬಂಧ ನೀಡಿರುವ ಕೋಷ್ಟಕಗಳು ವಿಷಯದ ಸುಲಭಗ್ರಹಣಕ್ಕೆ ದಾರಿಮಾಡಿಕೊಟ್ಟಿವೆ.
ಹಳಗನ್ನಡ ಕಾವ್ಯ ಅರ್ಥ ಮಾಡಿಕೊಳ್ಳಲು ನಿಘಂಟು, ವ್ಯಾಕರಣ ಪುಸ್ತಕಗಳು ಸಹಾಯ ಮಾಡಿದರೂ ಸರಿಯಾಗಿ ಆಸ್ವಾದಿಸಲು ಸ್ವಂತ ಪರಿಶ್ರಮ ಬೇಕೆನ್ನುವುದು ಲೇಖಕರ ಅಭಿಮತ.
ಹಳೆಗನ್ನಡದ ಎಲ್ಲ ಮುಖ್ಯ ಕೃತಿಗಳನ್ನು ಪೂರ್ಣವಾಗಿ ಆಸ್ವಾದಿಸಲು ಸಾಧ್ಯವಾಗದಿದ್ದಲ್ಲಿ, ಕನಿಷ್ಠ ಮುಖ್ಯ ರಸಘಟ್ಟಗಳನ್ನಾದರೂ ಅರಿಯುವುದು ಅಗತ್ಯ ಎನ್ನುವ ಲೇಖಕರ ಕಳಕಳಿ ಖಂಡಿತ ಸ್ವೀಕಾರಾರ್ಹವಾದುದು.
ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಬರೆಯಲಾದ ಈ ಕೃತಿ ಬೋಧಕರಿಗೂ ಕಾವ್ಯಾಸ್ವಾದಕರಿಗೂ ಅಷ್ಟೇ ಉಪಯುಕ್ತ ಎಂಬುದು ಸತ್ಯ.
ತಮ್ಮ ಉಪಾಧ್ಯಾಯ ವೃತ್ತಿಯ ಸಾರವನ್ನು ಧಾರೆ ಎರೆದು ಕೃತಿ ರಚಿಸಿರುವ ಲೇಖಕ ಗೋಪಾಲ್ ರವರಿಗೆ ಅಭಿನಂದನೆಗಳು.ಹಾಗೆಯೇ ನವಕರ್ನಾಟಕ ಪ್ರಕಾಶನಕ್ಕೂ.
"ಕಿರಿದರೊಳ್ ಪಿರಿದರ್ಥ" ನೀಡುವ ಈ ಕೃತಿಯನ್ನು ಪಡೆಯಿರಿ, ಓದಿರಿ ಹಾಗೂ ಆನಂದಿಸಿರಿ.
|
ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|