
|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸಣ್ಣ ಕತೆ, ಕಾದಂಬರಿ, ಕವಿತೆ, ನಾಟಕ, ವಿಮರ್ಶೆ, ಅನುವಾದಗಳಿಂದ ಸಮೃದ್ಧವಾಗಿರುವ ಡಾ.ಯು.ಆರ್.ಅನಂತಮೂರ್ತಿ ಅವರ ಸಮಗ್ರ ವಾಙ್ಮಯವನ್ನು ಆಪ್ತವಾಗಿ ಅನುಸಂಧಾನ ಮಾಡಿ ಅದರಿಂದ ಮೂಡೂವ ದರ್ಶನವನ್ನು ಕಾಣಿಸುವ ಮಹತ್ವಾಕಾಂಕ್ಷೆ ಈ ಪುಸ್ತಕದಲ್ಲಿ ಕಂಡುಬರುತ್ತದೆ. ಸುಮಾರು ಆರು ದಶಕಗಳ ವಿವಿಧ ಘಟ್ಟಗಳಲ್ಲಿ ವೈವಿಧ್ಯಮಯವಾಗಿ ರೂಪುಗೊಂಡ ಅನಂತಮೂರ್ತಿ ವಾಙ್ಮಯದ ಬಹುಮುಖತೆಯನ್ನೂ ಬಹುಧ್ವನಿಯನ್ನೂ ಸೂಕ್ಷ್ಮವಾಗಿ ಅವಲೋಕಿಸಿರುವ ಟಿ.ಪಿ.ಅಶೋಕ ಅವರ ಈ ಸಮಗ್ರ ಅಧ್ಯಯನವು ನಮ್ಮ ಕಾಲದ ಧೀಮಂತ ಲೇಖಕರೊಬ್ಬರ ಸಿದ್ಧಿ-ಸಾಧನೆಗಳನ್ನು ತೋರಿ ತೂಗಿ ಬೆಲೆಕಟ್ಟುವಲ್ಲಿ ಸಾಕಷ್ಟು ಸಫಲವಾಗಿದೆ. ಆಯಾ ಪ್ರಕಾರಗಳಲ್ಲಿ ಸೂಚಿತವಾಗುವ ಅನನ್ಯತೆಯನ್ನೂ ವಿಶಿಷ್ಟತೆಯನ್ನೂ ಕಾಣಿಸುತ್ತಲೇ ಅವುಗಳ ಸದ್ಯದ ಮತ್ತು ಸಾರ್ವಕಾಲಿಕ ಪ್ರಸ್ತುತತೆಗಳನ್ನು ಮನಗಾಣಿಸಿಕೊಡುವ ಅಶೋಕರ ವಿಮರ್ಶೆಯು ಅನಂತಮೂರ್ತಿಯವರ ಸಮಗ್ರ ಸಾಹಿತ್ಯದ ಆಳ ಅಗಲಗಳನ್ನು ಓದುಗರ ಅನುಭವಕ್ಕೆ ತರುವಲ್ಲಿ ತುಂಬ ಯಶಸ್ವಿಯಾಗಿದೆ. ಬಿಡಿ ಕೃತಿಗಳ ಓದಿನಲ್ಲಿ ಪಡೆದುಕೊಂಡ ಅರಿವನ್ನು ಸಮಗ್ರ ವಾಙ್ಮಯದ ಒಟ್ಟಾರೆ ತಿಳುವಳೀಕೆಗೆ ಹೆಣೆಯುವ, ಸಮಗ್ರ ಸಾಹಿತ್ಯದ ಅಧ್ಯಯನದಲ್ಲಿ ಪಡೆದುಕೊಂಡ ವಿವೇಕದಲ್ಲಿ ಬಿಡಿ ಕೃತಿಗಳ ಸ್ವರೂಪವನ್ನು ಬೆಳಗುವ ಚಲನಶೀಲತೆ ಈ ಪುಸ್ತಕದ ವೈಶಿಷ್ಟ್ಯವಾಗಿದೆ.
|
ಟಿ.ಪಿ. ಅಶೋಕ ಹುಟ್ಟಿದ್ದು ೧೯೫೫ರಲ್ಲಿ, ನಂಜನಗೂಡಿನಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ಎರಡು ವರ್ಷ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಸದ್ಯ ಸಾಗರದ ಲಾಲ್ ಬಹಾದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಹಾಗೂ ಇಂಗ್ಲಿಷ್ ವಿಭಾಗದ ಮುಖ್ಯಸ್ಥರು. ಆರನೆಯ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಅವರಿಗೆ ಲಭಿಸಿದೆ. ನಾಡಿನಾದ್ಯಂತ ಸಾಹಿತ್ಯ, ರಂಗಭೂಮಿ ಮತ್ತು ಚಲನಚಿತ್ರ ಸಹೃದಯತೆ ಕುರಿತು ಸುಮಾರು ಮುನ್ನೂರು ಕಿರು ಅವದಿಯ ಶಿಬಿರಗಳನ್ನು ನಡೆಸಿರುವ ಸಾಧನೆ ಅವರದು. ಸದ್ಯ ’ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲಿ ಪ್ರತಿ ಭಾನುವಾರ ’ಆಂತರ್ಯ’ ಎಂಬ ಅಂಕಣವನ್ನೂ, ’ಕಸ್ತೂರಿ’ ಮಾಸಿಕದಲ್ಲಿ ಪ್ರತಿ ತಿಂಗಳು ’ಪುಸ್ತಕ ಸನ್ನಿಧಿ’ ಎಂಬ ಅಂಕಣವನ್ನೂ ಬರೆಯುತ್ತಿದ್ದಾರೆ. ಕಳೆದ ಮೂರು ದಶಕಗಳಿಂದ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹ, ಹೀಗೆ ಹಲವು ಪ್ರಕಾರಗಳಲ್ಲಿ ತೊಡಗಿಕೊಂಡಿರುವ ಅವರು ಇದುವರೆಗೆ ಇಪ್ಪತ್ತೊಂಬತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ಸಾಹಿತ್ಯ ಸಂಪರ್ಕ, ಸಾಹಿತ್ಯ ಸಂದರ್ಭ, ಶಿವರಾಮ ಕಾರಂತ: ಎರಡು ಅಧ್ಯಯನಗಳು, ವಾಸ್ತವತಾವಾದ, ಪುಸ್ತಕ ಪ್ರೀತಿ, ಪುಸ್ತಕ ಸಮಯ, ಸಾಹಿತ್ಯ ಸಂಬಂಧ, ತೇಜಸ್ವಿ ಕಥನ, ಯು.ಆರ್. ಅನಂತಮೂರ್ತಿ: ಒಂದು ಅಧ್ಯಯನ ಮುಖ್ಯ ಕೃತಿಗಳು. ಅವರು ಸಂಪಾದಿಸಿರುವ ಕೃತಿಗಳಲ್ಲಿ ಎ.ಕೆ. ರಾಮಾನುಜನ್ ನೆನಪಿನ ಸಂಪುಟ, ಶಿವರಾಮ ಕಾರಂತ: ಈ ಶತಮಾನದ ನೋಟ, ಕಂಬಾರರ ಕಾವ್ಯ: ಕೆಲವು ಅಧ್ಯಯನಗಳು, ಆರ್ಕೆಸ್ಟ್ರಾ ಮತ್ತು ತಂಬೂರಿ (ಗೌರೀಶ ಕಾಯ್ಕಿಣಿಯವರ ಆಯ್ದ ಲೇಖನಗಳು), ಅರೆಶತಮಾನದ ಅಲೆಬರಹಗಳು (ಕೆ.ವಿ.ಸುಬ್ಬಣ್ಣನವರ ಸಮಗ್ರ ಲೇಖನಗಳು), ವೈದೇಹಿ ವಾಚಿಕೆ ಗಮನಾರ್ಹವಾದುವು. ಫಾದರ್ ಸೆರ್ಗಿಯಸ್, ರಿಕ್ತರಂಗಭೂಮಿ, ಓವರ್ಕೋಟ್ ಅನುವಾದಿತ ಕೃತಿಗಳು. ಸಾಹಿತ್ಯ ಸಂಚಾರ ಇತ್ತೀಚಿನ ಕೃತಿ. ಅಶೋಕ ಅವರು ಪಡೆದಿರುವ ಅನೇಕ ಪ್ರಶಸ್ತಿಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿ.ಎಮ್.ಇನಾಂದಾರ್ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ತೀನಂಶ್ರೀ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ, ಸಂದೇಶ್ ವಿಶೇಷ ಪ್ರಶಸ್ತಿ, ಎಸ್.ವಿ.ಪರಮೇಶ್ವರ ಭಟ್ಟ ಸಂಸ್ಮರಣಾ ಪ್ರಶಸ್ತಿ ಮುಖ್ಯವಾದುವು.
|
|
| |
|
|
|
|