
|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಎಪ್ಪತ್ತು ಆಧುನಿಕ ಕನ್ನಡ ಸಣ್ಣಕತೆಗಳ ಸಮರ್ಥ ವಿಶ್ಲೇಷಣೆ ಈ ಪುಸ್ತಕದಲ್ಲಿದೆ. ಬಿಡಿ ಕೃತಿಗಳ ಪರಿಶೀಲನೆಯಲ್ಲೇ ಕನ್ನಡ ಸಣ್ಣಕತೆ ಸಾಗಿ ಬಂದಿರುವ ಹಾದಿಯನ್ನು ಸೂಚಿಸುವ ಮಹತ್ವಾಕಾಂಕ್ಷೆ ಈ ಬರಹದಲ್ಲಿ ಕಾಣಿಸುತ್ತದೆ. ಪಂಜೆ ಮಂಗೇಶರಾಯರಿಂದ ಮೌನೇಶ ಬಡಿಗೇರರವರೆಗೆ ಹಬ್ಬಿರುವ ಟಿ.ಪಿ.ಆಶೋಕ ವರ ಈ ವಿಮರ್ಶಾ ಕಥನದಲ್ಲಿ ಹಲವು ಪೀಳಿಗೆಗಳ, ಪಂಥಗಳ, ಮನೋಧರ್ಮಗಳ ಹಲವು ಮುಖ್ಯ ಲೇಖಕರ ಪ್ರಸಿದ್ಧ ಕತೆಗಳ ಚರ್ಚೆ ನಡೆದಿದೆ. ಆಯಾ ಕೃತಿಗಳ ಕಥನ ಕಾರಣವನ್ನು ಶೋಧಿಸುತ್ತ, ಅವುಗಳ ಸ್ವಾರಸ್ಯ ವೈಶಿಷ್ಟ್ಯಗಳತ್ತ ಗಮನಸೆಳೆಯುತ್ತ, ಅವು ಇತರ ಎಷ್ಟೋ ಮಹತ್ವದ ಕೃತಿಗಳ ಜೊತೆ ಇಟ್ಟುಕೊಂಡ ಅಂತರ್ ಪಠ್ಯೀಯ ಸಂಬಂಧಗಳನ್ನು ತೆರೆದು ತೋರುತ್ತ ಸಾಗುವ ಈ ಪುಸ್ತಕದಲ್ಲಿ ಆಧುನಿಕ ಸಣ್ಣಕತೆ ಪರಂಪರೆಯ ಒಂದು ಸ್ಥೂಲ ಚಿತ್ರವೇ ಬಿಂಬಿತವಾಗಿದೆ. ಸಾಹಿತ್ಯಾಸಕ್ತರ ಅನುಭವವನ್ನು ಇನ್ನಷ್ಟು ಸಮೃದ್ಧಗೊಳಿಸಬಲ್ಲ, ಸಾಹಿತ್ಯದ ವಿದ್ಯಾರ್ಥಿ ಅಧ್ಯಾಪಕರಿಗೆ ಹೊಸ ಒಳನೋಟಗಳನ್ನು ಸೂಚಿಸಬಲ್ಲ, ಸಂಶೋಧಕರಿಗೆ ಒಂದು ಮುಖ್ಯ ಆಕರವಾಗಿ ಒದಗಬಲ್ಲ ಒಂದು ಮಹತ್ವಪೂರ್ಣ ಪ್ರಕಟಣೆ ಇದು. ಥಿಯರಿಗಳ ಸಿಕ್ಕು ಮತ್ತು ಜಾರ್ಗನ್ನುಗಳ ಭಾರದಿಂದ ಮುಕ್ತವಾದ ಸರಳ ಸುಂದರ ಸಂವಹನ ಈ ಪುಸ್ತಕದ ಹೆಗ್ಗಳಿಕೆಯಾಗಿದೆ.
|
ಟಿ.ಪಿ. ಅಶೋಕ ಹುಟ್ಟಿದ್ದು ೧೯೫೫ರಲ್ಲಿ, ನಂಜನಗೂಡಿನಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ಎರಡು ವರ್ಷ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಸದ್ಯ ಸಾಗರದ ಲಾಲ್ ಬಹಾದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಹಾಗೂ ಇಂಗ್ಲಿಷ್ ವಿಭಾಗದ ಮುಖ್ಯಸ್ಥರು. ಆರನೆಯ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಅವರಿಗೆ ಲಭಿಸಿದೆ. ನಾಡಿನಾದ್ಯಂತ ಸಾಹಿತ್ಯ, ರಂಗಭೂಮಿ ಮತ್ತು ಚಲನಚಿತ್ರ ಸಹೃದಯತೆ ಕುರಿತು ಸುಮಾರು ಮುನ್ನೂರು ಕಿರು ಅವದಿಯ ಶಿಬಿರಗಳನ್ನು ನಡೆಸಿರುವ ಸಾಧನೆ ಅವರದು. ಸದ್ಯ ’ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲಿ ಪ್ರತಿ ಭಾನುವಾರ ’ಆಂತರ್ಯ’ ಎಂಬ ಅಂಕಣವನ್ನೂ, ’ಕಸ್ತೂರಿ’ ಮಾಸಿಕದಲ್ಲಿ ಪ್ರತಿ ತಿಂಗಳು ’ಪುಸ್ತಕ ಸನ್ನಿಧಿ’ ಎಂಬ ಅಂಕಣವನ್ನೂ ಬರೆಯುತ್ತಿದ್ದಾರೆ. ಕಳೆದ ಮೂರು ದಶಕಗಳಿಂದ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹ, ಹೀಗೆ ಹಲವು ಪ್ರಕಾರಗಳಲ್ಲಿ ತೊಡಗಿಕೊಂಡಿರುವ ಅವರು ಇದುವರೆಗೆ ಇಪ್ಪತ್ತೊಂಬತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ಸಾಹಿತ್ಯ ಸಂಪರ್ಕ, ಸಾಹಿತ್ಯ ಸಂದರ್ಭ, ಶಿವರಾಮ ಕಾರಂತ: ಎರಡು ಅಧ್ಯಯನಗಳು, ವಾಸ್ತವತಾವಾದ, ಪುಸ್ತಕ ಪ್ರೀತಿ, ಪುಸ್ತಕ ಸಮಯ, ಸಾಹಿತ್ಯ ಸಂಬಂಧ, ತೇಜಸ್ವಿ ಕಥನ, ಯು.ಆರ್. ಅನಂತಮೂರ್ತಿ: ಒಂದು ಅಧ್ಯಯನ ಮುಖ್ಯ ಕೃತಿಗಳು. ಅವರು ಸಂಪಾದಿಸಿರುವ ಕೃತಿಗಳಲ್ಲಿ ಎ.ಕೆ. ರಾಮಾನುಜನ್ ನೆನಪಿನ ಸಂಪುಟ, ಶಿವರಾಮ ಕಾರಂತ: ಈ ಶತಮಾನದ ನೋಟ, ಕಂಬಾರರ ಕಾವ್ಯ: ಕೆಲವು ಅಧ್ಯಯನಗಳು, ಆರ್ಕೆಸ್ಟ್ರಾ ಮತ್ತು ತಂಬೂರಿ (ಗೌರೀಶ ಕಾಯ್ಕಿಣಿಯವರ ಆಯ್ದ ಲೇಖನಗಳು), ಅರೆಶತಮಾನದ ಅಲೆಬರಹಗಳು (ಕೆ.ವಿ.ಸುಬ್ಬಣ್ಣನವರ ಸಮಗ್ರ ಲೇಖನಗಳು), ವೈದೇಹಿ ವಾಚಿಕೆ ಗಮನಾರ್ಹವಾದುವು. ಫಾದರ್ ಸೆರ್ಗಿಯಸ್, ರಿಕ್ತರಂಗಭೂಮಿ, ಓವರ್ಕೋಟ್ ಅನುವಾದಿತ ಕೃತಿಗಳು. ಸಾಹಿತ್ಯ ಸಂಚಾರ ಇತ್ತೀಚಿನ ಕೃತಿ. ಅಶೋಕ ಅವರು ಪಡೆದಿರುವ ಅನೇಕ ಪ್ರಶಸ್ತಿಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿ.ಎಮ್.ಇನಾಂದಾರ್ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ತೀನಂಶ್ರೀ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ, ಸಂದೇಶ್ ವಿಶೇಷ ಪ್ರಶಸ್ತಿ, ಎಸ್.ವಿ.ಪರಮೇಶ್ವರ ಭಟ್ಟ ಸಂಸ್ಮರಣಾ ಪ್ರಶಸ್ತಿ ಮುಖ್ಯವಾದುವು.
|
|
| |
|
|
|
|